ಯುವಕ ಮಂಡಲ (ರಿ.) ಇರಾ ಇದರ 49ನೇ ವಾರ್ಷಿಕೋತ್ಸವ ದಿನಾಂಕ 25-12-2022 ರ ಭಾನುವಾರ ಯುವಕ ಮಂಡಲದ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಮಧ್ಯಾಹ್ನ 3.30 ಕ್ಕೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮೇಳದ ದೇವರ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು, ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟದೊಂದಿಗೆ ಸಂಪನ್ನವಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಮಾಲಿಕರಾದ ಶ್ರೀ ದಿವಾಣ ಗೋವಿಂದ ಭಟ್ ಮಾತನಾಡಿ ಯಕ್ಷಗಾನಕ್ಕೂ ಇರಾಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಬಹಳ ವಿಸ್ತೃತವಾಗಿ ವಿವರಿಸಿದರು.ನಂತರ ಮಾತನಾಡಿದ ಶ್ರೀ ಗಣೇಶ್ ಮೆಡಿಕಲ್ಸ್ ಕಲ್ಲಡ್ಕ ಇದರ ಮಾಲಿಕರಾದ ಶ್ರೀ ಚಂದ್ರಶೇಖರ ರೈ ಕೊಲ್ಯ, ಯಕ್ಷಗಾನಕ್ಕೂ ಹಾಗು ಯುವಕ ಮಂಡಲಕ್ಕೂ ಇರುವ ನಂಟಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆಯೇ ತಾಲೂಕು ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಆರ್ ಕರ್ಕೇರ ಮಾತನಾಡಿ ಯುವಕಮಂಡಲದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಸ್ತುತ ಕಟೀಲು ಮೇಳದ ಪ್ರಬಂಧಕರಾದ ಶ್ರೀ ಶ್ರೀಧರ ಪೂಜಾರಿ ಪಂಜಾಜೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ಯುವಕ ಮಂಡಲದ ಸ್ಥಾಪಕ ಸದಸ್ಯರಾದ ಶ್ರೀ ಗೋಪಾಲ ಮಾಸ್ಟರ್ ಕುಂಡಾವು, ಶ್ರೀ ಜನಾರ್ಧನ ಪಕ್ಕಳ ತಾಳಿತ್ತಬೆಟ್ಟು ಇವರನ್ನು ಗೌರವಿಸಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ಊರಿನ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನ ನೀಡಲಾಯಿತು. ಯಕ್ಷಗಾನಕ್ಕೆ ಬೆನ್ನೆಲುಬಾಗಿ ನಿಂತು ಸಂಘದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುವ ಸಂಘದ ಸದಸ್ಯರಾದ ಶ್ರೀ ಸ್ಟೀವನ್ ಡಿಸಿಲ್ವ ದೈವದಹಿತ್ಲು, ಶ್ರೀ ಅದ್ರಾಮ ಡಿ ಇವರನ್ನು ಗೌರವಿಸಲಾಯಿತು. ಸಂಧರ್ಭದಲ್ಲಿ ಉದ್ಯಮಿ, ಶ್ರೀ ಜಗದೀಶ ಆಳ್ವ ನಾರ್ಯಗುತ್ತು, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಭರತ್ ರಾಜ್ ರೈ ಸಂಘದ ವಾರ್ಷಿಕ ವರದಿ ವಾಚಿಸಿದರು, ಶ್ರೀ ಪುಷ್ಪರಾಜ್ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀ ನಿತೇಶ್ ಶೆಟ್ಟಿ ಸಂಪಿಲ ವಂದಿಸಿದರು. ಯತಿರಾಜ್ ಶೆಟ್ಟಿ ಸಂಪಿಲ ಕಾರ್ಯಕ್ರಮ ನಿರೂಪಿಸಿದರು.












